ಹುಣಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿ ಉರುಳು ಹಾಕಿ ಜಿಂಕೆಯನ್ನು ಹಿಡಿದು ಕೊಂದು ಮಾಂಸ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರನ್ನು ಅರಣ್ಯ ಇಲಾಖೆ ಸಿಬ್ಬಂದಿ ಮಾಲು ಸಮೇತ ವಶಕ್ಕೆ ಪಡೆದಿದ್ದು, ಮೂವರು ಸ್ಥಳದಿಂದ ಪರಾರಿಯಾಗಿದ್ದಾರೆ.
ಕೊಳವಿಗೆ ಹಾಡಿಯ ಗಣೇಶ, ಬಿಲ್ಲೇನಹೊಸಳ್ಳಿ ಹಾಡಿಯ ರಾಮ ಬಂಧಿತರು. ಬಿಲ್ಲೇನಹೊಸಳ್ಳಿ ಹಾಡಿಯ ಗಣೇಶ, ವಿಶ್ವ ಮತ್ತು ಕುಮಾರ್ನ ಪತ್ತೆಗೆ ಬಲೆ ಬೀಸಲಾಗಿದೆ. ಬಂಧಿತರಿಂದ 40 ಕೆಜಿ ಜಿಂಕೆ ಮಾಂಸ, ಜಿಂಕೆಯ ತಲೆ, ಕಾಲುಗಳು, ಎರಡು ಕೊಂಬುಗಳು, ಚರ್ಮ, ಕೃತ್ಯಕ್ಕೆ ಬಳಸಿದ ಕೇಬಲ್ ವೈರ್ನಿಂದ ತಯಾರಿಸಿದ ಉರುಳು, ಕತ್ತಿ, ಮೊಬೈಲ್ ವಶಕ್ಕೆ ಪಡೆದು ಬಂಧಿತರನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.
ಉದ್ಯಾನದ ಹುಣಸೂರು ವಲಯದ ಕಚುವಿನಹಳ್ಳಿ ಶಾಖೆಯ ಕಚುವಿನಹಳ್ಳಿ ಸಣ್ಣಗದ್ದೆ ಗಸ್ತಿನ ತಟ್ಟಿಹಳ್ಳಿ ಪಾರೆ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಅರಣ್ಯ ಸಿಬ್ಬಂದಿ ಬುಧವಾರ ಮಧ್ಯಾಹ್ನ ಗಸ್ತು ತಿರುಗುತ್ತಿದ್ದ ವೇಳೆ ಉರುಳು ಹಾಕಿ ಗಂಡು ಜಿಂಕೆಯೊಂದನ್ನು ಹಿಡಿದು ಕೊಂದು ಮಾಂಸವನ್ನು ಮಾರಾಟ ಮಾಡಲು ಸಾಗಣೆ ಮಾಡಲು ಮುಂದಾಗಿದ್ದರು. ಈ ವೇಳೆ ಸಿಬ್ಬಂದಿ ತಂಡವನ್ನು ಹಿಂಬಾಲಿಸಿ ಕಾರ್ಯಾಚರಣೆ ನಡೆಸಿದ್ದಾರೆ ಎಂದು ಎಸಿಎಫ್ ದಯಾನಂದ್ ತಿಳಿಸಿದ್ದಾರೆ.